ಗಂಗಾವತಿ: ಕಿಲ್ಲಾ ಏರಿಯಾದಲ್ಲಿ ನರಕಸದೃಶ ವಾತಾವರಣ; ತೆರೆದ ಒಳಚರಂಡಿ ಗುಂಡಿಗೆ ಬಿದ್ದ ಜಾನುವಾರುಗಳು, ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!

ಗಂಗಾವತಿ: ನಗರದ 4ನೇ ವಾರ್ಡಿನ ಕಿಲ್ಲಾ ಏರಿಯಾ ನಿವಾಸಿಗಳು ದಿನನಿತ್ಯ ನರಕಸದೃಶ ವಾತಾವರಣದಲ್ಲಿ ಬದುಕುವಂತಾಗಿದೆ. ಇಲ್ಲಿನ ಒಳಚರಂಡಿ (ಯುಜಿಡಿ) ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಿಲ್ಲಾ ಏರಿಯಾ ಇಡೀ ಕಸದ ದೊಣ್ಣೆಯಾಗಿ ಮಾರ್ಪಟ್ಟಿದೆ. ನಗರಸಭೆಯ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕರ ಮತ್ತು ಜಾನುವಾರುಗಳ ಜೀವಕ್ಕೆ ಕಂಟಕ ಎದುರಾಗಿದೆ.ತೆರೆದ ಚರಂಡಿ ಗುಂಡಿಗೆ ಬಿದ್ದ ಕೋಣ, ಆಕಳು!ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಒಳಚರಂಡಿಯ ಬೃಹತ್ ಮ್ಯಾನ್ಹೋಲ್ (ಗುಂಡಿ) ಯಾವುದೇ ಸುರಕ್ಷಿತ ಮೂಚ್ಚಳವಿಲ್ಲದೆ ಸಂಪೂರ್ಣವಾಗಿ ತೆರೆದುಕೊಂಡಿದೆ. ನಿನ್ನೆ ರಾತ್ರಿ ಈ ಆಳವಾದ ಅಪಾಯಕಾರಿ ಗುಂಡಿಗೆ ಆಕಳು ಮತ್ತು ಕೋಣ ಬಿದ್ದಿದ್ದು, ಮೂಕ ಪ್ರಾಣಿಗಳು ತೀವ್ರ ಸಂಕಷ್ಟ ಅನುಭವಿಸಿವೆ.

ಈ ಭಾಗದಲ್ಲಿ ಸಣ್ಣ ಸಣ್ಣ ಶಾಲಾ ಮಕ್ಕಳು ದಿನನಿತ್ಯ ಆಟವಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಮಕ್ಕಳು ಈ ಗುಂಡಿಗೆ ಬಿದ್ದು ಪ್ರಾಣಾಪಾಯ ಸಂಭವಿಸುವ ಭೀತಿ ಎದುರಾಗಿದೆ. ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗಂತೂ ಇದು ಮೃತ್ಯುಕೂಪದಂತಿದೆ.ಕ್ಯಾರೆ ಎನ್ನದ ನಗರಸಭೆ ಅಧಿಕಾರಿಗಳುಕಿಲ್ಲಾ ಏರಿಯಾದ ಈ ದುಸ್ಥಿತಿಯ ಬಗ್ಗೆ ಮತ್ತು ತೆರೆದ ಮ್ಯಾನ್ಹೋಲ್ನಿಂದ ಉಂಟಾಗುತ್ತಿರುವ ಅಪಾಯಗಳ ಬಗ್ಗೆ ಇಲ್ಲಿನ ಸಾರ್ವಜನಿಕರು ಈಗಾಗಲೇ ನಗರಸಭೆ ಕಮಿಷನರ್ ಹಾಗೂ ಸಂಬಂಧಪಟ್ಟ ಸಿಬ್ಬಂದಿ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ಸಮಸ್ಯೆಗೆ ಕ್ಯಾರೆ ಎನ್ನದೆ, ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಳಕೆಗೆ ಬಾರದ ಮಹಿಳಾ ಶೌಚಾಲಯ; ಹರಡಿದ ಕಸದ ರಾಶಿಒಂದೆಡೆ ಒಳಚರಂಡಿಯ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೆ, ಮತ್ತೊಂದೆಡೆ ಇಡೀ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್, ಹೂವು ಹಾಗೂ ತ್ಯಾಜ್ಯ ವಸ್ತುಗಳ ಕಸದ ರಾಶಿ ಬಿದ್ದಿದೆ. ದುರ್ನಾತದಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಇಷ್ಟೇ ಅಲ್ಲದೆ, ಈ ಭಾಗದಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವಿದ್ದರೂ ಸಹ ಅದು ಸಮರ್ಪಕ ನಿರ್ವಹಣೆಯಿಲ್ಲದೆ ಸಾರ್ವಜನಿಕರ ಬಳಕೆಗೆ ಬಾರದಂತಾಗಿದೆ. ಇದರಿಂದಾಗಿ ಇಲ್ಲಿನ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ನಗರಸಭೆ?ಸ್ಥಳೀಯ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಒಟ್ಟಾಗಿ ನಿಂತು ತಮ್ಮ ವಾರ್ಡಿನ ನರಕ ಯಾತನೆಯನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. “ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವ ಮುನ್ನ ನಗರಸಭೆಯು ತಕ್ಷಣ ಎಚ್ಚೆತ್ತುಕೊಂಡು, ಈ ಒಳಚರಂಡಿ ಗುಂಡಿಗೆ ಸೂಕ್ತ ಮೂಚ್ಚಳ ಅಳವಡಿಸಬೇಕು. ಕಸದ ರಾಶಿಯನ್ನು ತೆರವುಗೊಳಿಸಿ, ಮಹಿಳಾ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು” ಎಂದು ಕಿಲ್ಲಾ ಏರಿಯಾದ ನಿವಾಸಿಗಳು ಕಡಕ್ ಆಗಿ ಒತ್ತಾಯಿಸಿದ್ದಾರೆ.

