ಅಂಧ ಮಕ್ಕಳು–ವೃದ್ಧರ ಸೇವೆಯೊಂದಿಗೆ ಬೂದಿರೆಡ್ಡಪ್ಪ ನಾಯಕರ ಪುಣ್ಯಸ್ಮರಣೆ ಅರ್ಥಪೂರ್ಣ ಆಚರಣೆಸಮಾಜಸೇವೆಯ ಮೂಲಕ ದಿವಂಗತ ನಾಯಕನ ಆದರ್ಶಗಳಿಗೆ ನಮನ

; ಗಂಗಾವತಿ ಜು. 12: ಉತ್ತರ ಕರ್ನಾಟಕದ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್. ಜಿ. ರಾಮುಲು ಅವರ ಗರಡಿಯಲ್ಲಿ ಬೆಳೆದ, ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಸಮಾಜಸೇವಕ ದಿವಂಗತ ಬೂದಿರೆಡ್ಡಪ್ಪ ನಾಯಕರ ಒಂಬತ್ತನೇ ವರ್ಷದ ಪುಣ್ಯಸ್ಮರಣೆಯನ್ನು ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರಟಗಿಯ ಶ್ರೀಮತಿ ಅಯ್ಯಮ್ಮ ಬೂದಿರೆಡ್ಡಪ್ಪ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಲಯನ್ಸ್ ಮನೋವಿಕಲಚೇತನ ಮಕ್ಕಳ ವಸತಿ ನಿಲಯ ಹಾಗೂ ಕಂಪ್ಲಿ ರಸ್ತೆಯ ನವಜೀವನ ವೃದ್ಧಾಶ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಂಧ ಮಕ್ಕಳು ಮತ್ತು ವೃದ್ಧರಿಗೆ ಅನ್ನಸಂತರ್ಪಣೆ, ಹಣ್ಣುಹಂಪಲು, ಉಡುಪು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿ ಮಾನವೀಯ ಸೇವೆ ಸಲ್ಲಿಸಲಾಯಿತು.ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಅಧ್ಯಕ್ಷ ಬೂದಿ ನಾಗರಾಜ್ ನಾಯಕ ನೇತೃತ್ವದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿ ದಿವಂಗತ ಬೂದಿರೆಡ್ಡಪ್ಪ ನಾಯಕ ಅವರ ಸಮಾಜಸೇವೆಯ ಆದರ್ಶಗಳನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬೂದಿ ನಾಗರಾಜ್ ನಾಯಕ, ಟ್ರಸ್ಟ್ ಹಲವು ವರ್ಷಗಳಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಿರಂತರ ಸಹಾಯ ಮಾಡುತ್ತಿದ್ದು, ಟ್ರಸ್ಟ್ನ ನೆರವಿನಿಂದ ಕಾನೂನು ಪದವಿ ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳು ಇಂದು ಗಂಗಾವತಿ ವಕೀಲರ ಸಂಘದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣ ವೆಚ್ಚವನ್ನೂ ಟ್ರಸ್ಟ್ ಭರಿಸುತ್ತಿದ್ದು, ಮುಂದೆಯೂ ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಯ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.ದಿವಂಗತ ಬೂದಿರೆಡ್ಡಪ್ಪ ನಾಯಕ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು, ಟ್ರಸ್ಟ್ನ ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.ಕಾರ್ಯಕ್ರಮದಲ್ಲಿ ಕಾರಟಗಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬೂದಿ ದೊಡ್ಡಬಸಪ್ಪ ನಾಯಕ, ವಕೀಲ ಹೊನ್ನಪ್ಪ ನಾಯಕ, ರಾಜಶೇಖರ, ಹನುಮೇಶ ಜೀರಾಳ, ಬಸವರಾಜ ತಳವಾರ, ಅವಿನಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

