ಗಂಗಾವತಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾರಿದ ಬೈಕ್ ರಾಲಿ: ವಿಜೃಂಭಣೆಯಿಂದ ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ​…

ಗಂಗಾವತಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾರಿದ ಬೈಕ್ ರಾಲಿ: ವಿಜೃಂಭಣೆಯಿಂದ ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ​…

ಗಂಗಾವತಿ: ಅಲ್-ವಕೀಲ್ ವೆಲ್ಫೇರ್ ಟ್ರಸ್ಟ್ (ರಿ) ಹಾಗೂ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ (ರಿ) ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ, 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಬೈಕ್ ರಾಲಿಯನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಯಿತು.​ಬೆಳಿಗ್ಗೆ 8:30ಕ್ಕೆ ಗಂಗಾವತಿ ಬಸ್ ನಿಲ್ದಾಣ ವೃತ್ತದಿಂದ ಆರಂಭವಾದ ಈ ಬೈಕ್ ರಾಲಿಯು ನೀಲಕಂಠೇಶ್ವರ ವೃತ್ತ, ಕನಕದಾಸ ಸರ್ಕಲ್, ಜುಲೈನಗರ ಮಾರ್ಗವಾಗಿ, ಮಹಾರಾಣಾ ಪ್ರತಾಪ್ ಸರ್ಕಲ್‌ನಿಂದ ಪಿ. ಇಸ್ಲಾಂಪುರ್ ಮಾರ್ಗವಾಗಿ ಸಾಗಿ ಗಾಂಧಿ ಸರ್ಕಲ್ ತಲುಪಿತು. ಬಳಿಕ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾಲಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಸ್ವಾತಂತ್ರ್ಯೋತ್ಸವದ ಈ ಸಂಭ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದೇ ತಾರೆಯಡಿಯಲ್ಲಿ ಪಾಲ್ಗೊಂಡು ಭಾವೈಕ್ಯತೆಯನ್ನು ಮೆರೆದರು.​ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಎಚ್.ಆರ್. ಶ್ರೀನಾಥ್ ಅವರು, “ಗಂಗಾವತಿ ಶಾಂತಿ ಪ್ರಿಯರ ನಾಡು ಮತ್ತು ಭಾವೈಕ್ಯತೆಯನ್ನು ಸಾರುವ ಬೀಡು” ಎಂದು ಬಣ್ಣಿಸಿದರು.​ಅಲ್-ವಕೀಲ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷರಾದ ಅಜರ್ ಅನ್ಸಾರಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದರೂ ದೇಶದಲ್ಲಿ ಇನ್ನೂ ಅನೇಕ ಸುಧಾರಣೆಗಳು ಆಗಬೇಕಿದೆ. ಭಾವೈಕ್ಯತೆಗೆ ಹೆಸರಾದ ಗಂಗಾವತಿಯಲ್ಲಿ ಸರ್ವ ಜನಾಂಗದವರು ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ‘ನಾವು ನಮ್ಮವರು’ ಎನ್ನುವ ಭಾವನೆಯೊಂದಿಗೆ ಗಟ್ಟಿಯಾಗಿ ಮುನ್ನಡೆಯೋಣ ಎಂದು ದೃಢಸಂಕಲ್ಪ ವ್ಯಕ್ತಪಡಿಸಿದರು.​ಕಾರ್ಯಕ್ರಮದಲ್ಲಿ ಅಲ್-ವಕೀಲ್ ವೆಲ್ಫೇರ್ ಟ್ರಸ್ಟ್‌ನ ಕಾರ್ಯದರ್ಶಿ ಇಸ್ಮಾಯಿಲ್ ಸಾಬ್ ಹಾಗೂ ಸರ್ವ ಸದಸ್ಯರು, ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ಶರಬಯ್ಯ, ಕಾರ್ಯದರ್ಶಿಗಳು ಮತ್ತು ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬೈಕ್ ರಾಲಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *