ಗೌರಿ ಹುಣ್ಣಿಮೆಗೆ ಸಿದ್ಧಗೊಂಡ ಸಕ್ಕರೆ ಗೊಂಬೆಗಳು : ಗ್ರಾಮೀಣ ಸೊಗಡಿನ ಪ್ರತಿಬಿಂಬ ಗೌರಿ ಹಬ್ಬ ಮಾರಾಟ ಬಲು ಜೋರು

ಬಳ್ಳಾರಿ / ಕಂಪ್ಲಿ: ಕಾರ್ತಿಕ ಮಾಸದಲ್ಲಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ, ಹೆಣ್ಣು ಮಕ್ಕಳಿಗೆ ಸಂಭ್ರಮವನ್ನು ತರುವ ಗೌರಿ ಹುಣ್ಣಿಮೆ ಆಚರಣೆ ಆರಂಭವಾಗಿದ್ದು, ಗೌರಿಯನ್ನು ಪಾರ್ವತಿಯ ಪ್ರತಿರೂಪವಾಗಿ ಪೂಜಿಸಲಾಗುತ್ತಿದ್ದು, ಇದಕ್ಕಾಗಿ ಪಟ್ಟಣದ ಚಿತ್ರಗಾರ ಕುಟುಂಬದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಗೌರಿ ಗೊಂಬೆಗಳು ತಯಾರಾಗುತ್ತಿದ್ದರೆ ಇನ್ನೊಂದೆಡೆ ಸಕ್ಕರೆ ಗೊಂಬೆಗಳ ತಯಾರಿ ಹಾಗೂ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.ಹಬ್ಬದ ಅಂಗವಾಗಿ ಸ್ಥಳೀಯ ಕಲಾವಿದರಾದ ಉತ್ತಂಗಿ ಶಂಬಣ್ಣ, ಉತ್ತಂಗಿ ಸುರೇಶ, ಉತ್ತಂಗಿ ಗೌರಮ್ಮ, ಸೃತಿ, ರೇಖಾ ಇವರ ಕೈಚಳಕದಲ್ಲಿ ತಯಾರಾದ ವಿವಿದ ಅಳತೆಯ ಗೌರಿದೇವಿ ಮೂರ್ತಿಗಳ ಮಾರಾಟ ಈಗಾಗಲೇ ಅರಂಭವಾಗಿದೆ. ಇನ್ನೊಂದು ಕಡೆ ಕಟ್ಟಿಗೆ ಅಚ್ಚುಗಳನ್ನು ಬಳಸಿ ಸಕ್ಕರೆ ಪಾನಕದಿಂದ ತಯಾರಿಸಿದ ಗೌರಿದೇವಿ ಮೂರ್ತಿ, ಗಣೇಶ, ಗೋಪುರ, ಕಳಸ, ಆರತಿ ಅಚ್ಚು, ಕುದುರೆ, ಒಂಟೆ, ಆನೆ ಅಂಬಾರಿ, ತೇರು ಸೇರಿದಂತೆ ವಿವಿಧ ಆಕರ್ಷಕ ವೈವಿದ್ಯಮಯ ಗೊಂಬೆಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದಾರೆ.ಮಠ, ದೇವಸ್ಥಾನ, ಪುರೋಹಿತರ ಹಾಗೂ ಕೆಲವೆಡೆ ಗ್ರಾಮದ ಮಠಸ್ಥರ, ಬ್ರಾಹ್ಮಣರು ಸೇರಿದಂತೆ ಮುಖಂಡರ ಮನೆಗಳಲ್ಲಿ ಗೌರಿದೇವಿ ಮೂರ್ತಿಯನ್ನು ನ.4ರಿಂದ ನ.6ವರೆಗೆ ಪ್ರತಿಷ್ಠಾಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ವಿಶಾಲವಾದ ತಟ್ಟೆಗಳಲ್ಲಿ ಸಕ್ಕರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಅದರಲ್ಲಿ ದೀಪಗಳನ್ನು ಇರಿಸಿ ಮೆರವಣಿಗೆ ಮೂಲಕ ಆರತಿ ಬೆಳಗಲು ಹೋಗುವ ರೂಡಿಯಿದೆ. ಆಗ ಮಕ್ಕಳು ಪಟಾಕಿ ಸಿಡಿಸುತ್ತಾ ಗೌರಿದೇವಿ ಮೂರ್ತಿ ಪ್ರತಿಷ್ಟಾನೆ ಸ್ಥಳಕ್ಕೆ ತಲುಪಿ ಭಕ್ತಿಯಿಂದ ಆರತಿ ಬೆಳಗಿ ನಮಸ್ಕಾರ ಮಾಡುತ್ತಾರೆ. ನ.6ರ ರಾತ್ರಿ ಗೌರಿ ಕುರಿತ ಜನಪದ ಹಾಡುಗಳನ್ನು ಹಾಡಲಾಗುತ್ತದೆ. ಗೌರಿದೇವಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ನದಿ, ಬಾವಿಗಳಲ್ಲಿ ವಿಸರ್ಜಿಸಲಾಗುತ್ತದೆ.
