ನ. 3ರಂದು ಕಂಪ್ಲಿ ಬಂದ್ ಕರೆ ನೀಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ….

ಬಳ್ಳಾರಿ / ಕಂಪ್ಲಿ: ಕುಂಟು ನೆಪ ಹೇಳದೇ, ಕೂಡಲೇ ಐಸಿಸಿ ಸಭೆ ಕರೆದು, 2ನೇ ಬೆಳೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಡ್ಯಾಂನಲ್ಲಿ ಸಾಕಷ್ಟು ನೀರಿರುವಾಗ ಎರಡನೇ ಬೆಳೆಗೆ ನೀರು ಕೊಡುವುದಕ್ಕೆ ಹಿಂಜರಿಕೆ ಏಕೆ? ನೀರಿನ ವಿಚಾರದಲ್ಲಿ ತುಂಗಭದ್ರ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಹೇಳಿಕೆ ಸಮಂಜಸವಲ್ಲ. ಡ್ಯಾಂ ಸುರಕ್ಷತೆ ಮಾಡಲಿ. ಆದರೆ, ಇರುವ ನೀರನ್ನು ಅನವಶ್ಯಕವಾಗಿ ಪೋಲು ಮಾಡದೇ, ಬೆಳೆಗೆ ನೀರು ಹರಿಸಿದರೆ ರೈತರು ಬದುಕು ಉತ್ತಮವಾಗಿರಲಿದೆ. ಬೇಸಿಗೆ ಬೆಳೆಗೆ ನೀರು ಕೊಡಬಹುದೆಂದು ಕನ್ನಯ್ಯನಾಯ್ಡು ಹೇಳುತ್ತಿದ್ದಾರೆ. 2026ರ ಮಾರ್ಚ್ ಕೊನೆವರೆಗೆ ನೀರು ಹರಿಸಿದರೆ, ಎರಡನೇ ಬೆಳೆ ತೆಗೆದುಕೊಳ್ಳಲಿದ್ದಾರೆ. ಏಪ್ರಿಲ್ ತಿಂಗಳಿಂದ ಮೂರು ತಿಂಗಳಲ್ಲಿ ಕ್ರಸ್ಟ್ ಗೇಟ್ ಕೂರಿಸಿ. ಅದನ್ನು ಬಿಟ್ಟು ರೈತರ ಹೊಟ್ಟೆ ಮೇಲೆ ಬರೆ ಎಳೆಯುವುದು ಸರಿಯಲ್ಲ. ನವೆಂಬರ್ ಕ್ರಾಂತಿ ಹಚ್ಚಿ, ಬ್ರಾಂತಿ ಮಾಡಿಸುತ್ತಿದ್ದಾರೆ. ಆದ್ದರಿಂದ ಎರಡನೇ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ, ನ.3ರಂದು ಕಂಪ್ಲಿ ತಾಲೂಕು ಬಂದ್ ಗೆ ಕರೆ ನೀಡಿದ್ದು, ರೈತಾಪಿ ವರ್ಗದವರು, ವ್ಯಾಪಾರಸ್ಥರು, ವರ್ತಕರು, ಸಂಘ-ಸಂಸ್ಥೆಯವರು ಬೆಂಬಲ ನೀಡುವ ಮೂಲಕ ಯಶಸ್ವಿಗೊಳಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾಸೋಣ ಎಂದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿ.ವಿರೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪನಾಯಕ, ರೈತ ಮುಖಂಡರಾದ ಚಲ್ಲಾವೆಂಕಟನಾಯ್ಡು, ಕೊಟ್ಟೂರು ರಮೇಶ, ಡಿ.ಮುರಾರಿ, ಎನ್.ಗಂಗಣ್ಣ, ವೆಂಕಟರಮಣ, ಈರಣ್ಣ, ಮಲ್ಲಪ್ಪ, ವಿ.ಟಿ.ರಾಜ, ಬಿಂಗಿ ವಿರುಪಣ್ಣ, ನಾಗಪ್ಪ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
