ದ್ವಿಚಕ್ರ ವಾಹನಗಳ ಮಾರಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ…

ದ್ವಿಚಕ್ರ ವಾಹನಗಳ ಮಾರಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ…

ಗಂಗಾವತಿ, ಕೊಪ್ಪಳ ಜಿಲ್ಲೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಭತ್ತದ ಕಣಜವಾಗಿ ಪ್ರಸಿದ್ಧಿ ಹೊಂದಿರುವುದರ ಜೊತೆಗೆ, ಸಂಡೇ ಮಾರ್ಕೆಟ್ನ ಹಳೆಯ ವಾಹನಗಳ ಮಾರಾಟಕ್ಕೂ ರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. “ಗಂಗಾವತಿ” ಎಂದರೆ ಸಾಕು, ಭತ್ತದ ನಾಡು ಹಾಗೂ ಸಂಡೇ ಮಾರ್ಕೆಟ್ ಎಂಬ ಹೆಸರು ಸಹಜವಾಗಿ ನೆನಪಾಗುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಸಂಡೇ ಮಾರ್ಕೆಟ್ನಲ್ಲಿ ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ವಾಹನಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಅಗತ್ಯವಾದ ಕಾನೂನುಬದ್ಧ ದಾಖಲೆಗಳನ್ನು ನೀಡದೇ ಮಾರಾಟಗಾರರು ಸತಾಯಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಜನರು ಗಂಗಾವತಿಯ ಸಂಡೇ ಮಾರ್ಕೆಟ್ಗೆ ಆಗಮಿಸಿ ಹಳೆಯ ವಾಹನಗಳನ್ನು ಖರೀದಿಸುತ್ತಾರೆ. ಆದರೆ ಖರೀದಿಯ ನಂತರ ವಾಹನಗಳ RC, ಇನ್ಸುರನ್ಸ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ನೀಡದೇ ಇರುವುದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಈ ಸಂಬಂಧ ಗಂಗಾವತಿ ನಗರ ಪೊಲೀಸ್ ಠಾಣೆಗೆ ಅನೇಕ ದೂರುಗಳು ದಾಖಲಾಗಿವೆ. ದಾಖಲೆಗಳಿಲ್ಲದ ವಾಹನ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೂರುಗಳ ಪರಿಶೀಲನೆ ನಡೆಸಿದ ಪೊಲೀಸ್ ಇಲಾಖೆ ಅಧಿಕಾರಿಗಳು, ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸಂಡೇ ಮಾರ್ಕೆಟ್ನಲ್ಲಿ ನಡೆಯುತ್ತಿದ್ದ ದ್ವಿಚಕ್ರ ವಾಹನಗಳ ಮಾರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಜೊತೆಗೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಗ್ರಾಹಕರ ಹಿತಕ್ಕಾಗಿ ಈ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರೆ, ಮತ್ತೊಂದೆಡೆ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ ಎಂದು ಕೆಲವರು ಹೇಳಿದ್ದಾರೆ.

