ಕರ್ನಾಟಕದ ರಾಜಧಾನಿ ಬೆಂಗಳೂರು ನಲ್ಲಿ ಸಿಪಿಐಎಂ ಪಕ್ಷದ ಹಿರಿಯ ನಾಯಕ ಶ್ರೀ ನಿತ್ಯಾನಂದ ಸ್ವಾಮಿ ಅವರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ…

ಶ್ರೀಯುತರು ಗಂಗಾವತಿ ತಾಲೂಕಿನಲ್ಲಿ ಸಿಪಿಐಎಂ ಪಕ್ಷ ಹಮ್ಮಿಕೊಂಡ ಎಲ್ಲಾ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿ ಜನಮನದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದರು.
ನಿತ್ಯಾನಂದ ಸ್ವಾಮಿಯವರ ನಿಧನದ ಹಿನ್ನೆಲೆ ಗಂಗಾವತಿಯ ಸಿಪಿಐಎಂ ಪ್ರಧಾನ ಕಾರ್ಯಾಲಯ ಹಾಗೂ ಎಪಿಎಂಸಿ ಗಂಜ್ ಕಾರ್ಯಾಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ನಮನ ಸಲ್ಲಿಸಲಾಯಿತು ಮತ್ತು ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐಎಂ ನಾಯಕರುಗಳಾದ ನಿರುಪಾದಿ ಬೆಣಕಲ್, ಬಸವರಾಜ್ ಮರಕುಂಬಿ, ಹುಸೇನಪ್ಪ ಹಾಗೂ ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ, ಲಿಂಗರಾಜ್ ಕ್ಯಾಂಪ್ ಮತ್ತು ಮಂಜುನಾಥ್ ಅವರುಗಳು ಮಾತನಾಡಿ, “ನಿತ್ಯಾನಂದ ಸ್ವಾಮಿಯವರು ಹಾಕಿಕೊಟ್ಟ ಹೋರಾಟದ ದಾರಿಯಲ್ಲಿ ಸಿಪಿಐಎಂ ಪಕ್ಷ ಮತ್ತು ಅದರ ಎಲ್ಲಾ ಪದಾಧಿಕಾರಿಗಳು ಮುಂದುವರೆಯಲಿದ್ದಾರೆ” ಎಂದು ತಿಳಿಸಿದ್ದಾರೆ.

