ಪ್ರಸಿದ್ಧ ಗ್ರಾಮ ದೇವತೆ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ಶ್ರದ್ಧೆಯ ಧಾರ್ಮಿಕ ಕಾರ್ಯಕ್ರಮಗಳು.

ಬಳ್ಳಾರಿ / ಕಂಪ್ಲಿ: ಗ್ರಾಮ ದೇವತೆ ಎಂಬ ಪ್ರಸಿದ್ಧಿ ಪಡೆದಿರುವ ಪಟ್ಟಣದ ಆರಾಧ್ಯ ದೇವತೆ ಶ್ರೀ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ಶಿವರಾತ್ರಿ ಅಮಾವಾಸ್ಯೆ ನಿಮಿತ್ಯ ಎಲೆಚೆಟ್ಟು, ಫುಷ್ಪಾಲಂಕಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಮಂಗಳವಾರ ನೆರವೇರಿದವು. ಪ್ರಾಚೀನ ಕಾಲದಿಂದಲೂ ತನ್ನದೇ ಇತಿಹಾಸ ಹೊಂದಿರುವ ಜೊತೆಗೆ ಪವಾಡ ದೇವತೆಯಾಗಿ ರೂಪುಗೊಂಡಿರುವ ಮಾರೆಮ್ಮ ದೇವಿಯ ದರ್ಶನವೂ ಅತ್ಯದ್ಬುತವಾಗಿದೆ. ಆದ್ದರಿಂದ ಶಿವರಾತ್ರಿ ಜಾಗರಣೆಯ ಮರುದಿನದ ಅಮಾವಾಸ್ಯೆ ಪ್ರಯುಕ್ತ ಬೆಳಿಗ್ಗೆಯಿಂದ ದೇವಾಲಯದಲ್ಲಿ ದೇವಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆ, ಪುನಸ್ಕಾರದ ಜೊತೆಗೆ ದೇವಿಗೆ ಫಲಪುಷ್ಪ ಮತ್ತು ಎಲೆಚೆಟ್ಟಿನ ಅಲಂಕಾರ ಮಾಡಲಾಗಿತ್ತು. ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ದರ್ಶನ ಪಡೆಯುವ ಮೂಲಕ ಪುನೀತರಾದರು.

ವರದಿ : ಜಿಲಾನಸಾಬ್ ಬಡಿಗೇರ್
