ಕೇಂದ್ರ ಸರ್ಕಾರದ ನೀತಿ ಖಂಡಿಸಿ, ಕಂಪ್ಲಿಯಲ್ಲಿ ಪ್ರತಿಭಟನೆ..

ಬಳ್ಳಾರಿ / ಕಂಪ್ಲಿ : ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡುತ್ತಿರುವ ಕೇಂದ್ರ ಸರ್ಕಾರ ನೀತಿಯನ್ನು ಖಂಡಿಸಿ, ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಗ್ರಾಪಂ ನೌಕರರು, ಕಟ್ಟಡ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಹಮಾಲಿ ಕಾರ್ಮಿಕರು ಸಹಕಾರದೊಂದಿಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಂತರ ಸಿಐಟಿಯು ತಾಲೂಕು ಅಧ್ಯಕ್ಷ ಐ.ಹೊನ್ನೂರಸಾಬ್, ಕಾರ್ಯದರ್ಶಿ ಆರ್.ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರ ವಿವಿಧ ಕಾರ್ಮಿಕರನ್ನು ಬದುಕಿಗೆ ಕಲ್ಲು ಹಾಕುವ ನಿಟ್ಟಿನಲ್ಲಿ ಹೊಸ ನೀತಿಯನ್ನು ತರಲು ಹೊರಟಿರುವುದು ದುರ್ಧೈವವಾಗಿದೆ. ಕೇಂದ್ರ ಸರ್ಕಾರ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. ಶ್ರಮಶಕ್ತಿ ನೀತಿ ಬೇಡ. ಗ್ರಾಪಂಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡಿ ಭೂಕಾಯ್ದೆಗಳನ್ನು ತಿದ್ದುಪಡಿಯೊಂದಿಗೆ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಲು ಹುನ್ನಾರ ನಡೆಸಿದೆ. ಆದ್ದರಿಂದ ಕೂಡಲೇ ಕಾರ್ಮಿಕ ವಿರೋದ ನೀತಿಗಳನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಹೋರಾಟವು ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರಾಜಾಸಾಬ್ ನೆಲ್ಲುಡಿ, ತಾಲೂಕು ಅಧ್ಯಕ್ಷ ಜಡೆಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಾಂದ್ಬಾಷಾ, ಖಜಾಂಚಿ ಚಂದ್ರಶೇಖರ, ಮುಖಂಡರಾದ ಬಂಡಿ ಬಸವರಾಜ, ಶಾಂತಪ್ಪ, ಆರ್.ಏಸಯ್ಯ, ಹುಸೇನಿ, ಅನುರಾಧ, ತಿಪ್ಪಮ್ಮ, ಶಾಂತಮ್ಮ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
