ವಿಮೋಚನಾ ಹೋರಾಟದ ಇತಿಹಾಸ ತಿಳಿದು ದೇಶಕ್ಕೆ ಮಾದರಿಯಾಗಿ: ಸಂಕ್ರಾಂತಿ ಪ್ರಸಾದ್ ..

ವಿಮೋಚನಾ ಹೋರಾಟದ ಇತಿಹಾಸ ತಿಳಿದು ದೇಶಕ್ಕೆ ಮಾದರಿಯಾಗಿ: ಸಂಕ್ರಾಂತಿ ಪ್ರಸಾದ್ ..

ಗಂಗಾವತಿ : ನಗರದ ವಿದ್ಯಾನಗರದಲ್ಲಿರುವ ಶ್ರೀ ಶಾರದಾ ಶಿಕ್ಷಣ ಸಂಸ್ಥೆಯ ಎಸ್‌ಜಿವಿಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂಕ್ರಾಂತಿ ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು. ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ **ಸಂಕ್ರಾಂತಿ ಪ್ರಸಾದ್**, ಹಿರಿಯರು ನಡೆಸಿದ ಹೋರಾಟ ಮತ್ತು ತ್ಯಾಗದ ಫಲವಾಗಿ ನಮಗೆ ದೊರೆತ ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಶಿಸ್ತು, ಸಂಸ್ಕಾರ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ದೇಶಕ್ಕೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ **ರಾವಿ ರಾಜಶೇಖರ್** ಮಾತನಾಡಿ, ಕಲ್ಯಾಣ ಕರ್ನಾಟಕ ವಿಮೋಚನಾ ದಿನವು ಈ ಭಾಗದ ಜನರ ಹೋರಾಟ, ತ್ಯಾಗ ಮತ್ತು ಸ್ವಾಭಿಮಾನದ ಪ್ರತೀಕವಾಗಿದೆ. ವಿಮೋಚನಾ ಹೋರಾಟದ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿದುಕೊಳ್ಳುವುದು ಅಗತ್ಯ. ಈ ಭಾಗವು ಶಿಕ್ಷಣ, ಉದ್ಯೋಗ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಐತಿಹಾಸಿಕ ಹಿನ್ನೆಲೆ, ಮಹತ್ವ ಹಾಗೂ ಇಂದಿನ ಪೀಳಿಗೆಯ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಹಾಗೂ ನಾಡಿನ ಇತಿಹಾಸದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡ ಪರಿಣಾಮ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದ ಮೂಲಕ ಕಲ್ಯಾಣ ಕರ್ನಾಟಕದ ಇತಿಹಾಸ ಹಾಗೂ ವಿಮೋಚನಾ ಹೋರಾಟದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ, ನಾಡಿನ ಅಭಿವೃದ್ಧಿಯಲ್ಲಿ ಯುವಜನರ ಪಾತ್ರದ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಟಿ.ವಿ. ಸತ್ಯನಾರಾಯಣ, ಸದಸ್ಯರಾದ ಜಿ. ಕೃಷ್ಣ ರಾವ್, ಕೆ.ಬಿ.ಜಿ.ಕೆ. ರೆಡ್ಡಿ, ಎಸ್. ವೆಂಕಟೇಶ್ವರ ರಾವು, ಟಿ.ವಿ. ಸುಬ್ಬರಾವು, ಜಿ. ರಾಯುಡು, ಕಲ್ಯಾಣಂ ಕಾಂತಾರಾವ್, ಸಂಸ್ಥೆಯ ಆಡಳಿತಾಧಿಕಾರಿ ವೈ. ಸುದರ್ಶನ್ ರಾವು, ಹಿರಿಯರಾದ ಪಂಪನಗೌಡ, ಎಸ್‌ಜಿವಿಆರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಉದಯಶ್ರೀ, ಎಸ್‌ಜಿವಿಆರ್ ತೆಲುಗು ಮಾಧ್ಯಮದ ಮುಖ್ಯೋಪಾಧ್ಯಾಯರಾದ ದುರ್ಗಾ ಪ್ರಸಾದ್, ಎಚ್‌ಆರ್‌ಎಸ್‌ಎಂ ಪ್ರಾಥಮಿಕ ತೆಲುಗು ಮಾಧ್ಯಮದ ಮುಖ್ಯೋಪಾಧ್ಯಾಯರಾದ ಮಧುಮತಿ ಹಾಗೂ ಶಿಕ್ಷಕ-ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *