ಮೋರೆರ್ ಶಿಲಾ ಸಮಾಧಿಗಳ ರಕ್ಷಣೆಗೆ ಕ್ರಮ. ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜು ಹೇಳಿಕೆ..ಬಿಸಿಲು ಲೆಕ್ಕಿಸಿದೇ ಶಿಲಾ ಸಮಾಧಿಗಳ ಪರಿಶೀಲಿಸಿದ ಅಧಿಕಾರಿಗಳು..

ಗಂಗಾವತಿ : ಹಿರೇ ಬೆಣಕಲ್ ಗ್ರಾಮದ ಮೋರೆರ್ ಶಿಲಾ ಸಮಾಧಿಗಳ ಮನೆಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜು ಅವರು ಹೇಳಿದರು.ತಾಲೂಕಿನ ಹಿರೇಬೆಣಕಲ್ ಗ್ರಾಮದ ಮೋರೆರ್ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಶಿಲಾ ಸಮಾಧಿಗಳ ವೀಕ್ಷಣೆ ಮಾಡಿ ಮಾತನಾಡಿದರು.3000 ವರ್ಷಗಳ ಇತಿಹಾಸ ಇರುವ ಮೋರೆರ್ ಬೆಟ್ಟದಲ್ಲಿ 3000 ಶಿಲಾ ಸಮಾಧಿಗಳು ಇದ್ದವು, ಕಾಲಕ್ರಮೇಣ ಇದೀಗ ಅಂದಾಜು 300-400 ಶಿಲಾ ಸಮಾಧಿಗಳು ಇರಬಹುದು. ಸರಿಯಾದ ಅಂಕಿ ಅಂಶ ತಿಳಿಯಲು ಸರ್ವೇ ನಡೆಸಲಾಗುವುದು.

ಸರ್ವೇಕ್ಷಣಾ ಇಲಾಖೆಯವರು ಬೆಟ್ಟದಲ್ಲಿರುವ 8 ವಿಧದ ಶಿಲಾ ಸಮಾಧಿಗಳ ಸರ್ವೇ ನಡೆಸಬೇಕು. ಇದರಲ್ಲಿಗುಣಮಟ್ಟ, ರಿಪೇರಿ ಮಾಡಬಹುದಾದ ಹಾಗೂ ಬಿದ್ದಿರುವ ಶಿಲಾ ಸಮಾಧಿಗಳ ಸರ್ವೇ ಮಾಡಿ ಪ್ರತಿ ತಿಂಗಳು ಮೇಲಧಿಕಾರಿಗಳಿಗೆ ಕುರಿತು ವರದಿ ನೀಡಬೇಕು ಎಂದರು.ಶಿಲಾ ಸಮಾಧಿಗಳ ಮನೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯವರು ಆ್ಯಂಟಿ ಪೌಚಿಂಗ್ ಕ್ಯಾಂಪ್ ಹಾಕಿ ಸೋಲಾರ್ ಲೈಟ್ ಮತ್ತು ಸೋಲಾರ್ ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು. ಜೊತೆಗೆ ಶಿಲಾಸಮಾಧಿ ಬಳಿ ಇರುವ ಕೊಳಕ್ಕೆ ದನ-ಕರು ನೀರು ಕುಡಿಯಲು ಬರುತ್ತವೆ. ಇದನ್ನು ತಪ್ಪಿಸಲು 1 ಕಿಮೀ ದೂರದಲ್ಲಿ ಪ್ರತ್ಯೇಕ ಕೃಷಿ ಹೊಂಡ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಿಲಾ ಸಮಾಧಿಗಳ 1 ಕಿ.ಮೀ. ಸುತ್ತಲೂ ತಂತಿ ಬೇಲಿ ಹಾಕಿ ಅವುಗಳ ರಕ್ಷಣೆ ಮಾಡಬೇಕಿದೆ. ಹಿರೇ ಬೆಣಕಲ್ ಗ್ರಾಮದಿಂದ ಬೆಟ್ಟಕ್ಕೆ ಬರುವ ರಸ್ತೆಯ ಬಗ್ಗೆ ಮಾಹಿತಿ ಪಡೆಯುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಮೋರೆರ್ ಬೆಟ್ಟದ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇತಿಹಾಸ ತಜ್ಞರಾದ ಮಂಜುನಾಥ ದೊಡ್ಡಮನಿ ಅವರು, ‘ಮೋರೆರ್ ಬೆಟ್ಟದ ಇತಿಹಾಸ ಹಾಗೂ ಶಿಲಾ ಸಮಾಧಿಗಳ’ ಕುರಿತು ಮಾಹಿತಿ ನೀಡಿದರು.ಗ್ರಾಮದಿಂದ ಬೆಟ್ಟಕ್ಕೆ ಬರಲು ದಾರಿ ವ್ಯವಸ್ಥೆ ಮಾಡುವುದು ಹಾಗೂ ಹಿರೇಬೆಣಕಲ್ ನಲ್ಲಿರುವ ನಿರ್ಮಿತಿ ಕೇಂದ್ರವನ್ನು ಮ್ಯೂಸಿಎಂ ಮಾಡುವುದು ಸೇರಿ ಇತರೆ ಬೇಡಿಕೆಗಳ ಮನವಿಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜು ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು. *ಉರಿ ಬಿಸಿಲು ಲೆಕ್ಕಿಸದೇ ಪರಿಶೀಲನೆ* : ಸುಡು ಬಿಸಿಲು ಲೆಕ್ಕಿಸದೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜು ಅವರು *ಬೆಳಗ್ಗೆ 10 ಗಂಟೆಯಿಂದ 1.30* ರವರೆಗೆ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳ ಪರಿಶೀಲನೆ ನಡೆಸಿದರು. ಖುದ್ದಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜು ಅವರೇ ಮೊಬೈಲ್ ನಲ್ಲಿ ಬೆಟ್ಟದ ಗುಂಡುಗಳಿಗೆ ಬರೆದ ಬಣ್ಣದ ಪೇಯಿಂಟಿಂಗ್ ಮತ್ತು ಶಿಲಾ ಸಮಾಧಿಗಳ ಫೋಟೋ, ವಿಡಿಯೋ ಮಾಡಿಕೊಂಡರು. ನಂತರ ಸಮಾಧಾನ ಚಿತ್ತದಿಂದ ಬೆಟ್ಟದ ಅಭಿವೃದ್ಧಿಗೆ ‘ಇತಿಹಾಸ ತಜ್ಞರು ಹಾಗೂ ಸ್ಥಳೀಯ ಮುಖಂಡರ ಸಲಹೆ’ ಪಡೆದರು.

*ಮೌನ ಧ್ಯಾನ ವ್ರತ ಸ್ಥಳಕ್ಕೆ ಭೇಟಿ :* ಆದಿಮಾನವರ ನೆಲೆಯಾದ ಹಿರೇಬೆಣಕಲ್ ಮೋರೆರ್ ಶಿಲಾ ಸಮಾಧಿಗಳ ಸಂರಕ್ಷಣೆಗೆ ಒತ್ತಾಯಿಸಿ ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಗುಡ್ಲಾನೂರು ಅವರು ಫೆ.13ರಿಂದ ಫೆ.15ರವರೆಗೆ ಕೈಗೊಂಡಿದ್ದ ಮೌನ ಧ್ಯಾನ ವ್ರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ ಅವರು ಭೇಟಿ ನೀಡಿ ಮೋರೆರ್ ಬೆಟ್ಟದ ಅಭಿವೃದ್ಧಿಯ ಭರವಸೆ ನೀಡಿದರು.

ಈ ವೇಳೆ ಗಂಗಾವತಿಯ ಧ್ಯಾನ ಯೋಗ ಕೇಂದ್ರದ ಸದಸ್ಯರು ಹಾಗೂ ಸ್ಥಳಿಯರು ಇದ್ದರು.ಈ ವೇಳೆ, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ತಾಪಂ ಇಓ ರಾಮರೆಡ್ಡಿ ಪಾಟೀಲ್, ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣಾ ಸಹಾಯಕ ರವೀಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ನಾಗರಾಜ, ಅರಣ್ಯ ಇಲಾಖೆಯ ಆರ್ ಎಫ್ ಓ ಬಸವರಾಜ ಪೂಜಾರ್, ಪಿಡಿಓ ಇಂದಿರಾ, ಇತಿಹಾಸ ತಜ್ಞರಾದ ಮಂಜುನಾಥ ದೊಡ್ಡಮನಿ, ಸ್ಥಳೀಯರಾದ ವೀರೇಶ ಅಂಗಡಿ, ಬಸನಗೌಡ ಹೊಸಳ್ಳಿ, ಈಶಪ್ಪ ಕುಂಬಾರ, ಚಂದ್ರಶೇಖರ ಕುಂಬಾರ್, ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.

