ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ..

ಗಂಗಾವತಿ.:>ಪ್ರತಿಯೊ0ದು ಮಗುವಿನಲ್ಲೂ ಸಹ ಪ್ರತಿಭೆ ಎನ್ನುವುದು ಇರುತ್ತದೆ. ಅದನ್ನು ನಾವುಗಳು ಗುರುತಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಅಂದಾಗ ಮಾತ್ರ ಅವರು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಶಂಕರಗೌಡ ಮಾಲಿ ಪಾಟೀಲ್ ಹೇಳಿದರು.ನಗರದ ಐಎಂಎ ಭವನದಲ್ಲಿ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಠಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಬುನಾದಿಯಾಗಿದ್ದು, ಅವುಗಳನ್ನು ಜವಾಬ್ದಾರಿಯುತವಾಗಿ ಎದುರಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ ವಿಭಾಗದಲ್ಲಿ ಅಧಿಕ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಗುರುತಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸಮಾಜವು ಸಹ ಗುರುತಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿಯೇ ಪ್ರತಿಭಾ ಪುರಸ್ಕಾರಗಳಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಿಗೆ ಸನ್ಮಾನಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದರಿಂದ ಇತರ ವಿದ್ಯಾರ್ಥಿಗಳು ಸಹ ಪ್ರೇರಣೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಸಮಾಜದವರು ನಮ್ಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಗಂಗಾಮತ ಸಮಾಜದ ತಾಲೂಕಿನ ಮಾಜಿ ಅಧ್ಯಕ್ಷರಾದ ಈ.ಧನರಾಜ್ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ದೂರ ದೃಷ್ಠಿಯನ್ನು ಹಿಟ್ಟುಕೊಂಡು ವಿದ್ಯಾಭ್ಯಾಸವನ್ನು ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸತತ ಪ್ರಯತ್ನ ಹಾಗೂ ಪರಿಶ್ರಮ ತುಂಬಾ ಅವಶ್ಯಕವಾಗಿರುತ್ತದೆ. ಹಾಗಾಗಿಯೇ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಜೀವನದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಂಡು ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷೆಗಳು ಜೀವನವನ್ನು ರೂಪಿಸುವುದಿಲ್ಲ. ಪರೀಕ್ಷೆಯ ಜೊತೆಗೆ ಪಠೇತರ ಚಟುವಟಿಕೆಗಳಲ್ಲಿ ಕೂಡ ವಿದ್ಯಾರ್ಥಿಗಳು ಸಕ್ರೀಯವಾಗಿರಬೇಕು ಎಂದು ಹೇಳಿದರು. ನಂತರ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕಗಳನ್ನು ಪಡೆದುಕೊಂಡಿರುವ ಗಂಗಾಮತ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹಿಸಲಾಯಿತು. ಹಾಗೂ ನಿವೃತ್ತ ನೌಕರರಿಗೂ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.ಗಂಗಾಮತ ಸಮಾಜದ ಮುಖಂಡರಾದ ಪರಶುರಾಮ ಮಡ್ಡೇರ್, ಈರಣ್ಣ ಹೆಬ್ಬಾಳ, ಪಂಪಾಪತಿ, ಆಂಜನೇಯ ಮಟ್ಟೂರು, ಎಚ್.ವೈ.ಮನಗೂಳಿ, ಹನುಂತಪ್ಪ, ಮಲ್ಲಿಕಾರ್ಜುನ ಪೋತರಾಜ್, ರಮೇಶ ಕಡ್ಡಿಪುಡಿ, ಆಂಜಿನೇಯ, ಹನುಮೇಶ ಭಟಾರಿ, ಅಮರೇಶ ಮಡ್ಡೇರ್. ವಿರುಪಾಕ್ಷಪ್ಪ, ಶರಣಬಸವ ಹಾಗೂ ಇತರರಿದ್ದರು.

ಕೆಪಿಎಲ್24ಸಿಎಂ,01. ಗಂಗಾವತಿಯ ಐಎಂಎ ಭವನದಲ್ಲಿ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಭಾನುವಾರ ಸನ್ಮಾನಿಸಿ, ಗೌರವಿಸಲಾಯಿತು.
