ಚಿಲ್ಲಿ ಕಣ್ಣೀರು: ಮಚ್ಚೆರೋಗದಿಂದ ಮೆಣಸಿನಕಾಯಿ ಇಳುವರಿ ಕುಂಠಿತ ಆತಂಕ: ಈ ವರ್ಷವೂ ರೈತ ಕಂಗಾಲು.

ಬಳ್ಳಾರಿ / ಕಂಪ್ಲಿ / ಕುರುಗೋಡು : ಗಣಿನಾಡು ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೆಳೆಯನ್ನೂ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಮೆಣಸಿನಕಾಯಿ ಬೆಳೆದ ರೈತರು ಮೇಲಿಂದ ಮೇಲೆ ನಷ್ಟ ಅನುಭವಿಸುತ್ತಲೇ ಇದ್ದಾರೆ. ಈ ವರ್ಷ ಕೂಡ ಮೆಣಸಿನಕಾಯಿ ಬೆಳೆಗೆ ಮಚ್ಚೆರೋಗ ಕಾಣಿಸಿಕೊಂಡಿದ್ದು, ಇಳುವರಿ ಕುಂಠಿತ ಆಗುವ ಆತಂಕ ಶುರುವಾಗಿದೆ.ಹವಾಮಾನ ವೈಪರಿತ್ಯ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಅಷ್ಟೇ ಅಲ್ಲ ಮೆಣಸಿನಕಾಯಿ ಬೆಳೆಗೆ ಮಚ್ಚೆರೋಗ ಕಾಣಿಸಿಕೊಂಡಿದ್ದು ಇಳುವರಿ ಕುಂಠಿತ ಆಗೋ ಆತಂಕವಿದೆ. ಕಳೆದ 3-4 ವರ್ಷಗಳಿಂದ ಬಳ್ಳಾರಿ ರೈತರು ಮೆಣಸಿನಕಾಯಿಗೆ ಉತ್ತಮ ದರ ಇಲ್ಲದೇ ನಷ್ಟ ಅನುಭವಿಸಿದ್ರು. ಈ ವರ್ಷ ಉತ್ತಮ ದರ ಸಿಕ್ಕಿದೆ. ಆದರೆ ಇಳುವರಿ ಕುಂಠಿತ ಆಗೋ ಭೀತಿ ಶುರುವಾಗಿದೆ. ಮೆಣಸಿನಕಾಯಿ ಬೆಳೆಗೆ ಹವಾಮಾನ ವೈಪರಿತ್ಯದಿಂದ ಮಚ್ಚೆರೋಗ ಕಾಣಿಸಿಕೊಂಡಿದ್ದು, ಎಷ್ಟೇ ಕ್ರಿಮಿನಾಶಕ ಸಿಂಪಡಿಸಿದ್ರೂ ಹತೋಟಿಗೆ ಬರ್ತಿಲ್ಲ. ಪ್ರತಿ ಎಕರೆಗೆ 20-25 ಕ್ವಿಂಟಾಲ್ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. ಆದರೆ ಈಗ ಎಕರೆಗೆ 10 ಕ್ವಿಂಟಾಲ್ ಮೆಣಸಿನಕಾಯಿ ಬೆಳೆಯೋದು ಕಷ್ಟ ಎನ್ನುತ್ತಿದ್ದಾರೆ. ರೈತ ಕೃಷ್ಣಪ್ಪ ಮಾತನಾಡಿ ವಾತಾವರಣದಲ್ಲಿ ಉಂಟಾಗಿರುವ ಭಾರೀ ಬದಲಾವಣೆಯಿಂದ ಮೆಣಸಿನಕಾಯಿಗೆ ಬೂದಿ ರೋಗ ಮತ್ತೆ ಮಚ್ಚೆ ರೋಗ ಹೆಚ್ಚಾಗಿದೆ. ಎಕರೆ 10 ಕ್ವಿಂಟಾಲ್ ಸಿಗೋದು ಅನುಮಾನ. ಗಿಡದಲ್ಲಿ ಕೆಳಗಿನ ಕಾಯಿ ಉಳಿದುಕೊಂಡಿದ್ದು, ಮೇಲಿನ ಕಾಯಿಗಳು ಸಂಪೂರ್ಣ ನಾಶವಾಗುತ್ತಿದೆ. ಔಷಧಿ ಸಿಂಪಡಣೆ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಆಗಸಬೇಕು ಎಂದು ಮನವಿ ಮಾಡಿದ್ದಾರೆ.ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಕುರುಗೋಡು ಭಾಗದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಭೂಮಿ ಇಲ್ಲದ ರೈತರು ಕೂಡ ಲೀಸ್ ಆಧಾರದಲ್ಲಿ ಭೂಮಿ ಪಡೆದು ಮೆಣಸಿನಕಾಯಿ ಬೆಳೆದಿದ್ದಾರೆ. ಪ್ರತಿ ಎಕರೆ ಮೆಣಸಿನಕಾಯಿ ಬೆಳೆಗೆ 1 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಮಚ್ಚೆರೋಗ ರೈತರ ಆತಂಕಕ್ಕೆ ಕಾರಣವಾಗಿದೆ. ಆದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ಅಗತ್ಯ ಕ್ರಿಮಿನಾಶಕ ಸಿಂಪಡಿಸಿ ಮಚ್ಚೆರೋಗವನ್ನು ಹತೋಟಿ ತರಬಹುದು ಅಂತಿದ್ದಾರೆ.ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಶಿಕಾಂತ್, ಸುಮಾರು 4 ಸಾವಿರ ಎರಕೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಈ ವಾತಾವರಣ ಶೀತ ಆಗಿರೋದರಿಂದ ಹಣ್ಣುಕೊಳೆ ರೋಗ ಹೆಚ್ಚಾಗಿದೆ. ಆದ್ದರಿಂದ ರೈತರು ಸೂಕ್ತ ಔಷಧಿ ಸಿಂಪಡಣೆ ಮಾಡಬೇಕು. ಕಾರ್ಬನ್ ಡೈಜಿಮ್ ಅನ್ನು ಒಂದು ಲೀಟರ್ ನೀರಿಗೆ ಒಂದು ಗ್ರಾಂ ಹಾಕಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.ಮೆಣಸಿನಕಾಯಿ ಬೆಳೆದ ರೈತರು ಪ್ರತಿ ವರ್ಷ ಕೈ ಸುಟ್ಟುಕೊಳ್ಳುತ್ತಲೇ ಇದ್ದಾರೆ. ಈ ವರ್ಷ ಉತ್ತಮ ದರ ಸಿಕ್ಕರೂ ಮಚ್ಚೆರೋಗದಿಂದ ಇಳುವರಿ ಕುಂಠಿತ ಆಗುತ್ತಿದ್ದು, ರೈತರು ನಷ್ಟ ಅನುಭವಿಸಬೇಕಾಗಿದೆ. ಅಧಿಕಾರಿಗಳು ಮಚ್ಚೆರೋಗ ನಿಯಂತ್ರಣಕ್ಕೆ ಸೂಕ್ತ ಔಷಧಿಯ ಸಲಹೆ ಕೊಟ್ಟರೆ ಪರಿಹಾರ ಸಿಗಬಹುದೆ?ವರದಿ : ಜಿಲಾನಸಾಬ್ ಬಡಿಗೇರ್
