ಕೃಷಿ ಉತ್ಪನ್ನಗಳಿಗೆ ಗ್ಯಾರಂಟಿ ಹಾಗೂ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು : ಬಿ.ವಿ. ಗೌಡ.

ಬಳ್ಳಾರಿ/ ಕಂಪ್ಲಿ : ಪಟ್ಟಣದ ಟಿಎಪಿಸಿಎಂಎಸ್ ಸೊಸೈಟಿ ಮುಂಭಾಗದಲ್ಲಿರುವ ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮಂಗಳವಾರ ರೈತ ದಿನವನ್ನು ಆಚರಿಸಿದರು.ರೈತ ದಿನಾಚರಣೆಯ ಅಂಗವಾಗಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ವೃತ್ತ ನಾಮಫಲಕಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಪ್ರೊ .ನಂಜುಂಡಸ್ವಾಮಿ ಅವರತ್ಯಾಗ, ಹೋರಾಟದ ಬದುಕು ಮತ್ತು ರೈತಪರ ಚಿಂತನೆಗಳನ್ನು ಸ್ಮರಿಸಲಾಯಿತು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ದೇಶದ ಆರ್ಥಿಕತೆಯ ಮೂಲಸ್ತಂಭವೇ ರೈತ. ರೈತರಿಗೆ ನ್ಯಾಯಯುತ ಬೆಲೆ, ಕೃಷಿ ಉತ್ಪನ್ನಗಳಿಗೆ ಗ್ಯಾರಂಟಿ ಹಾಗೂ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರಗಳು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಇಂದಿನ ದಿನದಲ್ಲಿ ಕೃಷಿ ಕ್ಷೇತ್ರವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ರೈತರ ಹಿತ ಕಾಯುವ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರೊ. ನಂಜುಂಡಸ್ವಾಮಿ ಅವರ ಆದರ್ಶಗಳನ್ನು ಯುವ ರೈತರು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ವಿ. ವೀರೇಶ್, ಕಾರ್ಯಧ್ಯಕ್ಷ ಕೊಟ್ಟೂರು ರಮೇಶ್, ನಗರ ಅಧ್ಯಕ್ಷ ಎನ್. ತಿಮ್ಮಪ್ಪನಾಯಕ ಸೇರಿದಂತೆ ಪದಾಧಿಕಾರಿಗಳಾದ ಚೆಲ್ಲಾ ವೆಂಕಟನಾಯ್ತು, ಡಿ. ಮುರಾರಿ, ಗಂಗಣ್ಣ, ಕೆ. ಕೃಷ್ಣ, ಕುರಿ ಮಂಜು, ವಿ.ಟಿ. ರಾಜು, ಯಮನೂರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್
