ಕವಿ ಮಹದೇವ ಮೋಟೆ ಸ್ಮರಣಾರ್ಥವಾಗಿ 111ನೇ ಕವಿಗೋಷ್ಠಿ..

ಗಂಗಾವತಿಯಲ್ಲಿ 111ನೇ ಕವಿಗೋಷ್ಠಿ-ಚಿಂತನೆ ನಡೆಸುವ ಶಕ್ತಿ ಕವಿಗಳಲ್ಲಿದೆ : ಟಿಆರ್ ಎಸ್ದೈನಂದಿನ ಬದುಕಿನಲ್ಲಿ ನಡೆಯುವ ಘಟನೆಗಳು ಸೇರಿದಂತೆ ಅನೇಕ ವಿಚಾರಗಳ ಕುರಿತು ಚಿಂತನೆ ನಡೆಸುವ ಶಕ್ತಿ ಕವಿಗಳಲ್ಲಿದೆ ಎಂದು ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ತಿಪ್ಪೇರುದ್ರಸ್ವಾಮಿ ಹೇಳಿದರು.ಸೋಮವಾರ ನಗರದ ಕಸಾಪ ಭವನದಲ್ಲಿ ಕವಿ ಮಹಾದೇವ ಮೋಟಿ ಸ್ಮರಣಾರ್ಥ ಕಾವ್ಯಲೋಕ ಸಂಘಟನೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ 111ನೇ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಅನೇಕ ವಿಷಯ ಮತ್ತು ಅಂಕು ಡೊಂಕುಗಳ ಬಗ್ಗೆ ಸಮಾಜಕ್ಕೆ ಚಿತ್ರಣ ನೀಡುವ ಶಕ್ತಿ ಕವಿಗಳಲ್ಲಿದೆ. ನೆಲ, ಜಲ, ಭಾಷೆ ಸೇರಿ ಅನೇಕ ಸಂಗತಿ ಕುರಿತು ಚಿಂತನೆ ನಡೆಸುವ ಪ್ರತಿಭೆವುಳ್ಳ ಕವಿಗಳನ್ನು ಪ್ರೋತ್ಸಾಹಿಸಬೇಕು ಎಂದರು. ಸಿಎನ್ಆರ್ ಸಪ್ರದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕರಿಗೂಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕವಿಗಳು ರಚಿಸುವ ಕವನಗಳು ಓದುಗರನ್ನು ಸೆಳೆಯಬೇಕು ಎಂದರು. ಮುಖ್ಯಅತಿಥಿ ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ, ಕಾವ್ಯಲೋಕ ಸಂಘಟನೆಯು 111ನೇ ಕವಿಗೋಷ್ಠಿ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಕವಿಗೋಷ್ಠಿ ಮೂಲಕ ಕವಿ ಮಹಾದೇವ ಮೋಟಿ ಅವರು ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಹಿರಿಯ ಕವಿ ಶರಣಪ್ಪ ತಳ್ಳಿ ಮಾತನಾಡಿ, ಬೌದ್ಧಿಕ ಕಸರತ್ತು, ಪದ ಜೋಡಣೆ ಕಾವ್ಯವಲ್ಲ, ಹಿರಿಯ ಕವಿಗಳ ಕಾವ್ಯ ಓದಬೇಕು, ಕವಿಗಳು ಅಧ್ಯಯನ ಮಾಡಿ ಕಾವ್ಯ ರಚನೆಗೆ ಮುಂದಾಗಬೇಕು ಎಂದು ಹೇಳಿ ಕವಿಗಳ ಕಾವ್ಯ ವಿಮರ್ಶಿಸಿದರು. ಯು.ಆರ್.ಶಿವರುದ್ರಪ್ಪ, ಭುವನೇಶ್ವರಿ ಸಾರಂಗಮಠ, ಸೋಮಶೇಖರ್ ಕಂಚಿ, ಶರಣಮ್ಮ ಅಂಗಡಿ, ಶಾಮೀದ್ ಲಾಠಿ, ಎಂ.ಎಸ್.ನಾರಾಯಣ್, ಕರಿಸಿದ್ದನಗೌಡ ಮಾಲಿ ಪಾಟೀಲ್, ಶಶಿಕಲಾ ಕುರುಗೋಡು, ನಾಗಭೂಷಣ ಅರಳಿ, ವಿರುಪಣ್ಣ ಡಣಾಪುರ, ನೀಲಮ್ಮ ಹಿರೇಮಠ ಮತ್ತಿತರರು ಕಾವ್ಯ ವಾಚಿಸಿದರು. ನಿವೃತ್ತ ತಹಶೀಲ್ದಾರ ಡಾ.ಕೆ.ಬಾಲಪ್ಪ, ವಾಸ್ತು ತಜ್ಞ ಮಂಜುನಾಥ ಕುರುಗೋಡು, ಸಮಾಜ ಸೇವಕಿ ರಾಧಾ ಉಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಧುಶ್ರೀ, ಕುಶಾಲ್ ಎಸ್.ಹೆಚ್., ರಿಜ್ವಾನ್ ಅವರಿಗೆ ಬಹುಮಾನ ವಿತರಿಸಲಾಯಿತು. ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಸಾಪ ತಾಲೂಕು ಅಧ್ಯಕ್ಷ ರುದ್ರೇಶ್ ಆರ್ಹಾಳ, ಗಾಯಕ, ಕಲಾವಿದ ಖಾಸಿಂ ಅಲಿ ಮುದ್ದಾಬಳ್ಳಿ ಭಾಗವಹಿಸಿದ್ದರು.ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ, ರಗಡಪ್ಪ ಹೊಸಳ್ಳಿ, ಕೃಷ್ಣ ಆಶೀಶ್ ಉಪಸ್ಥಿತರಿದ್ದರು. ಭುವನೇಶ್ವರಿ ಪ್ರಾರ್ಥನೆ ಹಾಡಿದರು. ಹೇರೂರು ಬಸವರಾಜ ಸ್ವಾಗತಿಸಿ ನಿರೂಪಿಸಿದರು.

