ಸೇತುವೆ ಕಟ್ಟಡದ ನೀರು ಸೋರಿಕೆ ತಡೆಗಟ್ಟುವಂತೆ ಎ.ಸಿ.ದಾನಪ್ಪ ಆಗ್ರಹ…

ಬಳ್ಳಾರಿ / ಕಂಪ್ಲಿ: ಕಂಪ್ಲಿ-ಕೋಟೆಯ ತುಂಗಭದ್ರ ನದಿ ತೀರದ ಸೇತುವೆ ಆರಂಭದ ಕಟ್ಟಡದ ಕೆಳಭಾಗದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ನೀರು ಸೋರಿಕೆಯಾಗಿದ್ದು, ಕೂಡಲೇ ಸಂಬಂಧಿಸಿದ ಲೋಕೋಪಯೋಗಿ ಮತ್ತು ಪುರಸಭೆ ಜಂಟಿಯಾಗಿ ದುರಸ್ಥಿ ಕಾರ್ಯ ಮಾಡುವ ಮೂಲಕ ಮುಂದಿನ ಅನಾಹುತ ತಪ್ಪಿಸಲು ಮುಂದಾಗಬೇಕು. ಇಲ್ಲವಾದಲ್ಲಿ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ತಿಳಿಸಿದರು. ಅವರು ಶುಕ್ರವಾರ ಪಟ್ಟಣದ ಕೋಟೆ ಪ್ರದೇಶದ ಆರಂಭ ಸೇತುವೆ ಕೆಳಭಾಗದಲ್ಲಿ ಸೋರಿಸುತ್ತಿರುವ ನೀರಿನ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾತನಾಡಿ, ಕಂಪ್ಲಿ ಸೇತುವೆ ತುಂಬಾ ಹಳೆಯದ್ದಾಗಿದ್ದು, ಇಲ್ಲಿನ ಸೇತುವೆ ಕೆಳಗಡೆಯ ಕಟ್ಟಡ ಮೂಲಕ ನೀರು ಸೋರುತ್ತಿವೆ. ಇಲ್ಲಿನ ಸೇತುವೆ ಕಂಪ್ಲಿ-ಗಂಗಾವತಿ ಸಂಪರ್ಕದ ಕೊಂಡಿಯಾಗಿದೆ. ಆದರೆ, ಕಂಪ್ಲಿ ಕಡೆಯಿಂದ ಗಂಗಾವತಿ ಕಡೆಗೆ ಸಾಗುವ ಆರಂಭದ ಸೇತುವೆ ಕೆಳಗಡೆಯ ಕಟ್ಟಡದಲ್ಲಿ ನೀರು ಸೋರುತ್ತಿದ್ದು, ಎಲ್ಲಿಂದ ನೀರು ಸೋರಿಕೆಯಾಗುತ್ತಿದೆ ಎಂಬುದನ್ನು ತಿಳಿಯಲು ಸಂಬಂಧಿಸಿದ ಅಧಿಕಾರಿಗಳಿಗೆ ಆಗುತ್ತಿಲ್ಲ. ಈಗಾಗಲೇ ಸೇತುವೆ ದುರಸ್ಥಿಯಲ್ಲಿದ್ದು, ಕಟ್ಟಡದಲ್ಲಿ ನೀರು ಸೋರುತ್ತಿರುವುದರಿಂದ ಕುಸಿಯುವ ಆತಂಕ ಮನೆ ಮಾಡಿದೆ. ಸೇತುವೆ ಆರಂಭದ ಸ್ಥಳವು ಮಣ್ಣಿನಿಂದ ಕೂಡಿದ್ದು, ಯಾವಾಗಬೇಕಾದ ನೀರಿನ ತಂಪಿನಿಂದ ಅನಾಹುತ ಎಡೆ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಸೇತುವೆ ಹಾಳಾಗುವ ಜೊತೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎಲ್ಲೋ ಎಸಿಯಲ್ಲಿ ಕುಳಿತು ಅಧಿಕಾರಿಗಳು ಅಧಿಕಾರ ಮಾಡುತ್ತಿದ್ದಾರೆ ಹೊರತು ಇಲ್ಲಿನ ಸಮಸ್ಯೆಗಳ ಬಗ್ಗೆ ನೋಡುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಗಂಗಾವತಿ-ಕಂಪ್ಲಿ ಲೋಕೋಪಯೋಗಿ ಮತ್ತು ಕಂಪ್ಲಿ ಪುರಸಭೆ ಜಂಟಿಯಾಗಿ ನೀರು ಸೋರಿಕೆಗೆ ಸೂಕ್ತಕ್ರಮವಹಿಸಿ, ಎಲ್ಲಿಂದ ಸೋರಿಕೆಯಾಗುತ್ತಿದೆ ಎಂಬುದನ್ನ ಪರಿಶೀಲಿಸಿ, ದುರಸ್ಥಿ ಕಾರ್ಯ ಮಾಡಬೇಕೆಂದು ಒತ್ತಾಯಿಸುವ ಜೊತೆಗೆ ಏರ್ಟೆಲ್, ಜಿಯೋ ಸೇರಿದಂತೆ ಇನ್ನಿತರ ಕಂಪನಿಯ ಕೇಬಲ್ ವೈರ್ ಗಳನ್ನು ಗುಂಡಿ ದೋಡಿ ಹಾಕುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಎಲ್ಲೆಂದರಲ್ಲಿ ತೆಗೆದು ಗುಂಡಿ ತೆಗೆದು, ಅಲ್ಲಿನ ಮುಖ್ಯವಾದ ಪೈಪ್ ಗಳನ್ನು ಹಾಳು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ವಿವಿಧ ಕೇಬಲ್ ವೈರ್ ಗಳನ್ನು ಹಾಕಲು ಅನುಮತಿ ನೀಡಬಾರದೆಂದು ಆಗ್ರಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
