ಎಮ್ಮಿಗನೂರು ಗ್ರಾಮದಲ್ಲಿ ರೈತ ಸಂಘದ ಕಛೇರಿ ಉದ್ಘಾಟನೆ : ರೈತರು ಪಕ್ಷಕ್ಕೆ ಸೀಮಿತವಾಗಬಾರದು : ವಾಮದೇವ ಮಹಾಂತ ಸ್ವಾಮಿ…

ಎಮ್ಮಿಗನೂರು ಗ್ರಾಮದಲ್ಲಿ ರೈತ ಸಂಘದ ಕಛೇರಿ ಉದ್ಘಾಟನೆ : ರೈತರು ಪಕ್ಷಕ್ಕೆ ಸೀಮಿತವಾಗಬಾರದು : ವಾಮದೇವ ಮಹಾಂತ ಸ್ವಾಮಿ…

ಬಳ್ಳಾರಿ / ಕಂಪ್ಲಿ : ರೈತರು ಈ ದೇಶದ ಬೆನ್ನೆಲುಬಾಗಿದ್ದು, ಯಾವುದೇ ಪಕ್ಷಕ್ಕೆ ಸೀಮಿತವಾಗಬಾರದು. ಅಂದಾಗ ಮಾತ್ರ ರೈತರು ಬದುಕು ಉತ್ತಮವಾಗುವ ಜೊತೆಗೆ ಗೌರವ ದೊರೆಯಲು ಸಾಧ್ಯ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಶುಕ್ರವಾರ ಪ್ರೋ.ನಂಜಂಡಸ್ವಾಮಿ ಜನ್ಮದಿನದ ಅಂಗವಾಗಿ ತಾಲೂಕು ಅಧ್ಯಕ್ಷ ವಿ.ವಿರೇಶ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಛೇರಿ ಉದ್ಘಾಟಿಸಿ ನಂತರದ ವೇದಿಕೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಇಲ್ಲಿನ ಮಠದಲ್ಲಿ ರೈತರಿಗೆ ತುಲಾಭಾರ ಮಾಡಲಾಗುತ್ತಿದೆ. ಈ ಬಾರಿ ಎಂಟು ಜನ ರೈತರಿಗೆ ತುಲಾಭಾರ ಮಾಡಲಾಗುವುದು ಎಂದರು.ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಎಮ್ಮಿಗನೂರು ಗ್ರಾಮದಲ್ಲಿ ನೀರು, ವಿದ್ಯುತ್, ಜೋಳದ ಸಮಸ್ಯೆ ಇದ್ದೇ ಇದೆ. ಇದರಿಂದ ರೈತರು ಒಗ್ಗಟ್ಟಾಗಿ ಸಮಸ್ಯೆಗಳನ್ನು ಹೋರಾಟದ ಮೂಲಕ ಪರಿಹರಿಸಿಕೊಳ್ಳಬೇಕಾಗಿದೆ. ಡಾ.ಸ್ವಾಮಿನಾಥ ವರದಿ ಜಾರಿಗೆ ಬದರೆ ರೈತರು ಬೆಂಬಲ ಬೆಲೆಯೊಂದಿಗೆ ಆರ್ಥಿಕವಾಗಿ ಸಬಲರಾಗುವ ಮೂಲ ಸಮೃದ್ಧಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಈಗಾಗಲೇ ತುಂಗಭದ್ರ ಜಲಾಶಯದ ಹೊಸ ಗೇಟ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಜೂನ್ ಒಳಗಾಗಿ ಗೇಟ್ ಅಳವಡಿಸಿ, ರೈತರಿಗೆ ನೀರು ಹರಿಸಬೇಕಾಗಿದೆ. ಜಲಾಶಯ ರೈತರ ಜೀವನಾಡಿಯಾಗಿದ್ದು, ಗೇಟಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಸರ್ಕಾರ ರೈತರ ಸಂಕಷ್ಟವನ್ನು ಆಲಿಸಿ, ಎಮ್ಮಿಗನೂರಿನಲ್ಲಿ ಕೂಡಲೇ ಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದರು.ತಾಲೂಕು ಅಧ್ಯಕ್ಷ ವಿ.ವಿರೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕಲುತನದಿಂದ ರೈತರ ಜೀವನ ನಡೆಯುತ್ತಿದೆ. ಇದರಿಂದ ರೈತರು ದೇಶದ ಜನತೆಗೆ ಅನ್ನ ನೀಡುತ್ತಿದ್ದಾರೆ. ಈ ಭಾಗದಲ್ಲಿ ರೈತರಿಗೆ ನ್ಯಾಯ ಒದಗಿಸುವ ಜೊತೆಗೆ ಒಗ್ಗಟ್ಟು ಮೂಡಿಸುವ ಹಿನ್ನಲೆಯಲ್ಲಿ ಕಛೇರಿ ಆರಂಭಿಸಲಾಗಿದೆ. ರೈತರ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸಿ, ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಸಮಾಜದ ಕಳಕಳಿಯೊಂದಿಗೆ ರೈತರಪರವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರ ರೈತರ ಕೃಷಿ ಕಾಯ್ದೆಗಳನ್ನು ಬಂದ್ ಮಾಡಿ, ತಮಗೆ ಬೇಕಾದ ಕಾಯ್ದೆಯನ್ನು ತಂದಿರುವುದು ವಿಪರ್ಯಾಸವಾಗಿದೆ. ಕೂಡಲೇ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಬಿಟ್ಟು, ರೈತರ ಅನುಕೂಲ ಮಾಡಿಕೊಡಬೇಕು ಎಂದರು.ಈ ಸಂದರ್ಭದಲ್ಲಿ ಸಂಡೂರು ತಾಲೂಕು ಅಧ್ಯಕ್ಷ ಬಸವರಾಜ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಲ್.ಪದ್ಮಾವತಿ, ಮುಖಂಡರಾದ ಸದಾ ಶಿವಪ್ಪ, ಚಲ್ಲಾವೆಂಕಟನಾಯ್ಡು, ಕಾಸಿಂಸಾಬ್, ಗುಂಡಪ್ಪ, ಕೊಟ್ಟೂರು ರಮೇಶ, ಕೆ.ಈರಣ್ಣ, ರಾಮು ಸೇರಿ ರೈತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *