ಕಂಪ್ಲಿ ಉತ್ಸವ ಹಿನ್ನಲೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ : ವಿಭಿನ್ನವಾಗಿ ಮೂಡಿಬಂದ ರಂಗೋಲಿ..

ಬಳ್ಳಾರಿ / ಕಂಪ್ಲಿ: ಪಟ್ಟಣದ ನೀರಾವರಿ ಮುಂಭಾಗದಿಂದ ಕೊಟ್ಟಾಲ್ ರಸ್ತೆಯ ಚೇತನ್ಶಾಲೆ ಬಳಿಯ ರಸ್ತೆವರೆಗೂ ಬುಧವಾರ ಬೆಳಿಗ್ಗೆ ಮಹಿಳೆಯರು ವಿವಿಧ ಆಕೃತಿಯ ರಂಗೋಲಿ ಬಿಡಿಸುತ್ತಿರುವುದು ಕಂಡು ಬಂತು. ಕಂಪ್ಲಿ ಉತ್ಸವದ ಹಿನ್ನಲೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿನ ಏಕಮುಖ ರಸ್ತೆಯಲ್ಲಿ ಸಾಕಷ್ಟು ಮಹಿಳೆಯರು ಮಾತಿನೊಂದಿಗೆ ಮತ್ತು ಕೈಬಳೆ ಸದ್ಧಿನ ಮೂಲಕ ರಂಗೋಲಿ ಚಿತ್ತಾರಕ್ಕೆ ಮೆರಗು ನೀಡಿದರು. ಗಂಡುಗಲಿ ಕುಮಾರರಾಮನ ಕೋಟೆ ಒಳಗೊಂಡಂತಹ ಚಿತ್ರವನ್ನು ಡಿ.ಪೂಜಾ ಭರತ್ ಇವರು ರಂಗೋಲಿಯೊಂದಿಗೆ ಬಿಡಿಸಿದರು. ಮತ್ತು ರತ್ನವೆಣಿ ಇವರು ಶಿವಲಿಂಗ ಆಧರಿತ ರಂಗೋಲಿ ಚಿತ್ತಾರ ಹಾಕಿದರು. ನವೀಲಿನಲ್ಲಿ ಅರಳಿದ ಶ್ರೀಕೃಷ್ಣ ಸೇರಿದಂತೆ 132 ರಂಗೋಲಿಯನ್ನು ಯುವತಿಯರು ಹಾಗೂ ಮಹಿಳೆಯರು ವಿಭಿನ್ನವಾಗಿ ಬಿಡಿಸುವ ಮೂಲಕ ನೋಡುಗರನ್ನು ಆಕರ್ಷಿಸಿದರು.

ಅಂಗಳದಲ್ಲಿ ವರ್ಣ ಮತ್ತು ವಿವಿಧ ವಿನ್ಯಾಸದ ರಂಗೋಲಿಗಳು ರಸ್ತೆಯ ಅಂದವನ್ನು ಹೆಚ್ಚಿಸಿದವು. ಕೆಂಧೂಳಿನಿಂದ ಕೂಡಿದ ರಸ್ತೆಗಳು ಇಂದಿನ ರಂಗೋಲಿಯಲ್ಲಿ ಕಲರ್ ಫುಲ್ ಆಗಿ ಕಾಣತೊಡಗಿದವು. ಇಲ್ಲಿನ ನಿರ್ಣಾಯಕಾದ ರಾಮಚಂದ್ರ ಚಿತ್ರಗಾರ, ಬಸವರಾಜ ಎಂ, ಶೋಭಾ ಸಿ ಕಾರ್ಯನಿರ್ವಹಿಸಿದರು. ಶಾಸಕ ಜೆ.ಎನ್.ಗಣೇಶ್ ಅವರ ಧರ್ಮಪತ್ನಿ ಶ್ರೀದೇವಿ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಇಂತಹ ಸ್ಪರ್ಧೆ ಸಹಕಾರಿಯಾಗಿದೆ. ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಸಹಕಾರಿಯಾಗಿದೆ. ರಂಗೋಲಿ ಕಲೆಯನ್ನು ಇಂದಿನ ಮಕ್ಕಳು ಹಾಗೂ ಯುವ ಜನತೆಗೆ ಪರಿಚಯಿಸಲು ಈ ಸ್ಪರ್ಧೆ ಅನುಕೂಲವಾಗಿದೆ ಎಂದರು. ನಂತರ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಶಿಲ್ಪ, ದ್ವಿತೀಯ ಸ್ಥಾನ ಮೀನಾಕ್ಷಿ ಹಾಗೂ ತೃತೀಯ ಸ್ಥಾನದೊಂದಿಗೆ ಜಿ.ಭಾಗ್ಯಲಕ್ಷ್ಮಿ, ಇವರು ಪ್ರಶಸ್ತಿ ಪಡೆದುಕೊಂಡರು. ಉಳಿದ ಮಹಿಳೆಯರಿಗೆ ಸಮಧಾನಕರ ಬಹುಮಾನ ವಿತರಸಿದರು.

ವರದಿ : ಜಿಲಾನಸಾಬ್ ಬಡಿಗೇರ್
