ತುಂಗಭದ್ರಾ ಆರತಿಯೊಂದಿಗೆ ಕಂಪ್ಲಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ : ಕಂಪ್ಲಿಯಲ್ಲಿ ತುಂಗಾರತಿ ಸಂಭ್ರಮವೋ ಸಂಭ್ರಮ : ವಾರಣಾಸಿ ಮಾದರಿಯಲ್ಲಿ ವೈಭವದ ಆರತಿ : ಮರುಕಳಿಸಿದ ಕಂಪ್ಲಿ ಇತಿಹಾಸ ವೈಭವ..

ಬಳ್ಳಾರಿ / ಕಂಪ್ಲಿ : ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಆಗಿರುವ ಕಂಪಲಿ ನಾಡಿನಲ್ಲಿ ತುಂಗಾರತಿ ಸಂಭ್ರಮವೋ ಸಂಭ್ರಮ. ಹೌದು. ಇಲ್ಲಿನ ಐತಿಕಾಸಿನ ಸೋಮಪ್ಪ ದೇವಸ್ಥಾನ ಮುಂಭಾಗದ ಕೆರೆ ಸನ್ನಿಧಾನದಲ್ಲಿ ಎರಡನೇ ಬಾರಿಯ ಕಂಪ್ಲಿ ಉತ್ಸವದಲ್ಲಿ ಪ್ರಯುಕ್ತ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ವಿಭಿನ್ನ, ವಿಜೃಂಭಣೆಯಿಂದ ಬುಧವಾರ ರಾತ್ರಿ ನಡೆದ ಆರತಿ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.ಭವ್ಯ ಮೆರವಣಿಗೆ ಐತಿಹಾಸಿಕ ಸೋಮಪ್ಪ ಕೆರೆ ತಲುಪಿದ ನಂತರ ವಾರಣಾಸಿಯ ಗಂಗಾರತಿ ತಂಡವರಿಂದ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಉತ್ಸವಕ್ಕೆ ಚಾಲನೆ ಸಿಕ್ಕಂತಾಯಿತು. ಮೊದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಅವರ ಸಮ್ಮುಖದಲ್ಲಿ ಶಾಸಕ ಜೆ.ಎನ್.ಗಣೇಶ ಅವರು ಕೆರೆಗೆ ಬಾಗಿನ ಅರ್ಪಿಸಿದರು. ತದನಂತರದಲ್ಲಿ ತುಂಗಭದ್ರಾ ಆರತಿ ಮೂಲಕ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಜನಸ್ತೋಮದ ನಡುವೆಯೂ ಸಂಭ್ರಮದಿಂದ ಗಂಗಾರತಿ ತಂಡದವರಿಂದ ಆರತಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ, ಶಾಸಕ ಗಣೇಶ್ ಅವರ ಧರ್ಮಪತ್ನಿ ಶ್ರೀದೇವಿ, ಮಾಜಿ ಶಾಸಕ ಭೀಮನಾಯ್ಕ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರವೀಂದ್ರಕುಮಾರ, ಡಿವೈಎಸ್ಪಿ ಪ್ರಸಾದ್ ಗೋಖುಲೆ, ಅಪರ ಜಿಲ್ಲಾಧಿಕಾರಿ ಜುಬೇರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಾನಂದ, ತಾಲೂಕು ಗ್ಯಾರಂಟಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ತಹಶೀಲ್ದಾರ್ ಜೂಗಲ್ ಮಂಜುನಾಯಕ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರು ಪಾಲ್ಗೊಂಡಿದ್ದರು. ಭರತನಾಟ್ಯ : ತುಂಗಭದ್ರ ಆರತಿ ಹಿನ್ನಲೆಯಲ್ಲಿ ಏಕಕಾಲಕ್ಕೆ ಇಲ್ಲಿನ ಹದಿನೆಂಟು ವೇದಿಕೆಯಲ್ಲಿ ಭರತನಾಟ್ಯ ನೃತ್ಯ ಪ್ರದರ್ಶಿಸಲಾಯಿತು. ಸಾಕಷ್ಟು ಜನರು ತುಂಗಭದ್ರಾ ಆರತಿಯನ್ನು ಕಣ್ತುಂಬಿಕೊಳ್ಳುವ ಜೊತೆಗೆ ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್
