ಅರಿವಂ ಪೊಸಯಿಸುವುದು ಧರ್ಮಂ’ : ಶಿಕ್ಷಕ ಸುನೀಲ್ ಮಾಲಿಪಾಟೀಲ್….

ಅರಿವಂ ಪೊಸಯಿಸುವುದು ಧರ್ಮಂ’ : ಶಿಕ್ಷಕ ಸುನೀಲ್ ಮಾಲಿಪಾಟೀಲ್….

ಬಳ್ಳಾರಿ ಕಂಪ್ಲಿ : ಪಟ್ಟಣದ ಚೇತನ ವಿದ್ಯಾನಿಕೇತನ ಶಾಲಾವರಣದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಡುಪಿ ಪದ್ಮಾವತಮ್ಮ ರಘುರಾಮಾಚಾರ್ ದತ್ತಿ, ರುಕ್ಮಿಣಮ್ಮ, ಎಸ್.ಎಂ.ನಾರಾಯಣಶೆಟ್ಟಿ ಹಾಗೂ ಎಂ.ಪಿ.ಪ್ರಕಾಶ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು. ವಿಜಯನಗರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶಿಕ್ಷಕ ಸುನೀಲ್ ಮಾಲಿಪಾಟೀಲ್ ‘ಪಂಪನ ಆದಿಪುರಾಣ ಮತ್ತು ದಾಸ ಸಾಹಿತ್ಯ’ ದತ್ತಿ ಉಪನ್ಯಾಸ ನೀಡಿ, ಅರಿವಂ ಪೊಸಯಿಸುವುದು ಧರ್ಮಂ’ ಎನ್ನುವುದು ಆದಿಕವಿ ಪಂಪನು ತನ್ನ ಆದಿಪುರಾಣದಲ್ಲಿ ನೀಡಿರುವ ಭವ್ಯ ವ್ಯಾಖ್ಯಾನವಾಗಿದೆ. ಇದರರ್ಥ ಅರಿವನ್ನು ನಿರಂತರವಾಗಿ ಹೊಸತುಗೊಳಿಸುವುದು, ವಿಕಸನಗೊಳಿಸುವುದು ನಿಜವಾದ ಧರ್ಮವಾಗಿದೆ. ಪಂಪನ ಆದಿಪುರಾಣವು ಮೊದಲ ತೀರ್ಥಂಕರ ವೃಷಭನಾಥನ ಚಂಪೂ ಕಾವ್ಯವಾಗಿದ್ದು, ಕನ್ನಡದ ಮೊದಲ ತೀರ್ಥಂಕರ ಪುರಾಣವಾಗಿದೆ. ವೈರಾಗ್ಯ ಮತ್ತು ತತ್ವಜ್ಞಾನವನ್ನು ಅರಹುವ ಆದಿಪುರಾಣವು ಮನುಷ್ಯನು ವೈಭೋಗದ ಜೀವನಕ್ಕಿಂತ ವೈರಾಗ್ಯದ ಜೀವನ ಅಳವಡಿಸಿಕೊಳ್ಳುವಂತೆ, ವೈರಾಗ್ಯ ಮತ್ತು ತಪಸ್ಸಿನ ಮೂಲಕ ಮೋಕ್ಷ ಗಳಿಸಬಹುದು ಎಂಬುದು ಮೂಲ ಆಶಯವಾಗಿದೆ.ತ್ಯಾಗ ಮಾಡುವ ಕಥೆ ಕಾವ್ಯದ ಕೇಂದ್ರಬಿಂದುವಾಗಿದೆ. ಮನುಷ್ಯ ವೈಭೋಗದ ಜೀವನವನ್ನು ಬೆನ್ನೆತ್ತಿ ಹೋಗುವ ಬದಲಿಗೆ ವೈರಾಗ್ಯವನ್ನು ಅಳವಡಿಸಿಕೊಂಡರೆ ಮೋಕ್ಷಗಳಿಸಲು ಸಾಧ್ಯವಿದೆ ಎಂದರು. ಚೇತನ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ್ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತೃಭಾಷೆ, ವಿಶೇಷವಾಗಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವುದು ಸಾಂಸ್ಕೃತಿಕ ಅಸ್ಮಿತೆ, ಬೌದ್ಧಿಕ ಬೆಳವಣಿಗೆ ಮತ್ತು ತಾಯಿ-ಮಕ್ಕಳ ನಡುವಿನ ಬಾಂಧವ್ಯಕ್ಕೆ ಅತ್ಯಗತ್ಯ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯುವುದರಿಂದ ಗ್ರಹಿಕೆ, ವಿಮರ್ಶಾತ್ಮಕ ಆಲೋಚನೆ ಮತ್ತು ಶೈಕ್ಷಣಿಕ ಸಾಧನೆ ಹೆಚ್ಚುತ್ತದೆ. ದೈನಂದಿನ ಜೀವನದಲ್ಲಿ ಮತ್ತು ಆಡಳಿತದಲ್ಲಿ ಕನ್ನಡ ಬಳಸುವ ಮೂಲಕ ಭಾಷೆಯನ್ನು ಉಳಿಸಿ, ಬೆಳೆಸಬೇಕು. ಎಂದರು.ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲಾ ಹಂತದಿಂದಲೇ ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಭಾಷಾ ಪ್ರಭುತ್ವ ಮತ್ತು ಜ್ಞಾನಾರ್ಜನೆಗೆ ಭದ್ರ ಬುನಾದಿಯಾಗುತ್ತದೆ. ಈ ಹಂತದಲ್ಲಿ ಸಾಹಿತ್ಯವನ್ನು ಆಸಕ್ತಿಯಿಂದ ಓದಲು ಸರಳ ಭಾಷೆಯಲ್ಲಿರುವ ಮಕ್ಕಳ ಕವಿತೆಗಳು ಮತ್ತು ಸಣ್ಣ ಕಥೆಗಳನ್ನು ಓದಲು ಪ್ರಾರಂಭಿಸಿ. ನಿಯತಕಾಲಿಕೆಗಳ ಓದಿ ದಿನಪತ್ರಿಕೆ, ವಾರಪತ್ರಿಕ, ಮಾಸಪತ್ರಿಕೆಗಳನ್ನು ಓದುವುದರಿಂದ ಸಮಕಾಲೀನ ಸಾಹಿತ್ಯ ಮತ್ತು ಭಾಷಾ ಶೈಲಿಯ ಪರಿಚಯವಾಗುತ್ತದೆ. ಶಾಲಾ ಗ್ರಂಥಾಲಯದಲ್ಲಿ ಲಭ್ಯವಿರುವ ವಿವಿಧ ಪ್ರಕಾರದ ಪುಸ್ತಕಗಳಾದ ಕಾದಂಬರಿ, ನಾಟಕ, ಪ್ರಬಂಧ ಅನ್ವೇಷಿಸಿ. ಎಂದರು. ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಎ.ಸಿ.ದಾನಪ್ಪ, ಅಂಬಿಗರ ಮಂಜುನಾಥ, ಸೋಮನಾಥ ಭೂಪಾಳರನ್ನು ಗೌರವಿಸಲಾಯಿತು.ಪತಂಜಲಿ ಯೋಗ ಸಮಿತಿ ನಿರ್ದೇಶಕ ವಿ.ರಾಮಲಿಂಗಯ್ಯ, ಕಸಾಪ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ,ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಶಿಕ್ಷಕರಾದ ಪಕ್ಕೀರೇಶ್, ಮಂಜುಳಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *