ಮಳೆಗೆ ನೆಲಕಚ್ಚಿದ ಭತ್ತದ ಬೆಳೆ : ನಷ್ಟಕ್ಕೊಳಗಾದ ರೈತ : ಬೆಳೆಹಾನಿ ಪರಿಹಾರಕ್ಕೆ ಒತ್ತಾಯ …

ಮಳೆಗೆ ನೆಲಕಚ್ಚಿದ ಭತ್ತದ ಬೆಳೆ : ನಷ್ಟಕ್ಕೊಳಗಾದ ರೈತ : ಬೆಳೆಹಾನಿ ಪರಿಹಾರಕ್ಕೆ ಒತ್ತಾಯ …

ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಸುರಿದ ಮಳೆ ಗಾಳಿಗೆ ಭತ್ತ ಬೆಳೆಗಳು ನೆಲಕಚ್ಚಿದ ಪರಿಣಾಮ ಭತ್ತದ ಕಾಳು ಮೊಳಕೆ ಹೊಡೆದು ರೈತರನ್ನು ನಷ್ಟಕ್ಕೆ ದೂಡುವಂತೆ ಮಾಡಿದೆ.ತಾಲೂಕು ಸಮೀಪದ ಬುಕ್ಕಸಾಗರದ ಏಳುಹೆಡೆ ನಾಗಪ್ಪ ದೇವಸ್ಥಾನ ಬಳಿಯಲ್ಲಿರುವ ರೈತ ಚನ್ನಪ್ಪಗೌಡ ಅವರ ಎರಡುವರೆ ಎಕರೆ ಜಮೀನಿನಲ್ಲಿ ಬೆಳೆದ ಭತ್ತದ ಬೆಳೆಯು ಮಳೆಗಾಹುತಿಯಾಗಿದೆ. ಸುಮಾರು ಲಕ್ಷಾಂತರ ರೂ.ಗಳ ಖರ್ಚು ಮಾಡಿ, ಬೆಳೆದ ಬೆಳೆಯು ಮಳೆರಾಯನ ಆರ್ಭಟಕ್ಕೆ ಹಾನಿಗೊಳಗಾಗುವಂತೆ ಮಾಡಿದೆ. ಮಳೆ ಗಾಳಿಯ ಹೊಡೆತಕ್ಕೆ ಎರಡುವರೆ ಎಕರೆಯಲ್ಲಿ ಒಂದು ವರೆ ಎಕರೆ ಬೆಳೆಯು ಸಂಪೂರ್ಣವಾಗಿ ನೆಲಸಮವಾಗಿ, ಮೊಳಕೆ ಹೊಡೆದಿದೆ. ಇದರಿಂದ ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಬೆಳೆಯು ಕೈಗೆ ಸೇರದಂತಾದ ಪರಿಸ್ಥಿತಿಯನ್ನು ತಂದೊಡ್ಡಿದೆ. ಒಟ್ಟಾರೆಯಾಗಿ ರೈತನ ಬದುಕು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈ ಭಾಗದಲ್ಲಿ ಸಾಕಷ್ಟು ರೈತರ ಬೆಳೆಗಳು ಮಳೆಗೆ ಹಾನಿಯಾಗಿವೆ. ಇದರಿಂದ ರೈತರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳು ಹಾನಿಗೊಳಗಾದ ರೈತರಿಗೆ ನಷ್ಟ ಪರಿಹಾರ ನೀಡುವ ಮೂಲಕ ರೈತರನ್ನು ಉಳಿಸಬೇಕೆಂಬುದಾಗಿದೆ.====ಕೋಟ್====ಮರ‍್ನಾಲ್ಕು ತಿಂಗಳು ಬಿಸಿಲು, ಮಳೆ, ಚಳಿ ಎನ್ನದೇ, ಭತ್ತದ ಬೆಳೆ ಬೆಳೆಯಲಾಗಿದೆ. ಇನ್ನೇನು ಒಂದೆರಡು ದಿನದಲ್ಲಿ ಕಟಾವು ಮಾಡಬೇಕಾಗಿದ್ದ ಸಂದರ್ಭದಲ್ಲಿ ಮಳೆರಾಯನ ಕಾಟದಿಂದ ಭತ್ತ ಬೆಳೆಯು ನೆಲಕ್ಕೆ ಬಿದ್ದು, ಮೊಳಕೆ ಹೊಡೆದಿದ್ದು, ಮುಕ್ಕಾಲು ಭಾಗದಷ್ಟು ಹಾನಿಯಾಗಿದೆ. ಪ್ರತಿ ಎಕರೆಗೆ 50-60 ಸಾವಿರ ರೂ.ಗಳನ್ನು ಖರ್ಚು ಮಾಡಿ, ಬೆಳೆದ ಸುಮಾರು ಒಂದುವರೆ ಎಕರೆ ಪ್ರದೇಶದ ಭತ್ತದ ಬೆಳೆಯು ನಷ್ಟವಾಗಿದೆ. ಇದರಿಂದ ರೈತರು ನಷ್ಟಕ್ಕೊಳಗಾಗಿದ್ದು, ಕೂಡಲೇ ಸರ್ಕಾರ ಬೆಳೆ ನಷ್ಟ ಪರಿಹಾರ ಒದಗಿಸಬೇಕು.ಚನ್ನಪ್ಪಗೌಡ, ಬೆಳೆ ನಷ್ಟಕ್ಕೊಳಗಾದ ರೈತ. ====ಕೋಟ್====ಇಲ್ಲಿನ ಎರಡುವರೆ ಎಕರೆಯಲ್ಲಿ ಒಂದುವರೆ ಎಕರೆಯ ಭತ್ತದ ಬೆಳೆಯು ಸಂಪೂರ್ಣವಾಗಿ ಮಳೆಗೆ ಹಾನಿಯಾಗಿದೆ. ಇದರಿಂದ ಕಷ್ಟಪಟ್ಟು ಬೆಳೆದ ರೈತನ ಬದುಕು ಸಾಲದ ಸುಳಿಗೆ ಸಿಲುಕುವಂತಾಗಿದೆ. ಆದಷ್ಟು ಬೇಗ ನಷ್ಟ ಪರಿಹಾರ ನೀಡುವ ಮೂಲಕ ರೈತರನ್ನು ಉಳಿಸಬೇಕು. ಎಲ್.ಎಸ್.ರುದ್ರಪ್ಪ, ಜಿಲ್ಲಾ ಮುಖಂಡ, ಕರ್ನಾಟಕ ರಾಜ್ಯರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿಕ ಬಣ), ಹೊಸಪೇಟೆ.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *